ಪೊಳಲಿ ಯಕ್ಷೋತ್ಸವ ಸಮ್ಮಾನಿತ ಕಲಾರತ್ನಗಳು
ಲೇಖಕರು : ಬಿ. ಜನಾರ್ದನ ಅಮ್ಮುಂಜೆ
ಶುಕ್ರವಾರ, ಒಕ್ಟೋಬರ್ 30 , 2015
|
ಫಲ್ಗುಣೀ ನದಿ ತಟದಲ್ಲಿ ಮೆರೆಯುತ್ತಿರುವ ಮಾತೆ ರಾಜರಾಜೇಶ್ವರಿಯ ಆಡುಂಬೊಲವಾದ ಪೊಳಲಿಯ ಪವಿತ್ರ ಸ್ಥಳದಲ್ಲಿ ಯಕ್ಷಗಾನ ಕಲಾ ಸೇವೆಗಾಗಿ 1996ರಲ್ಲಿ ಉದಯಿಸಿದ ಸಂಸ್ಥೆ ಯಕ್ಷಕಲಾ ಪೊಳಲಿ. ಯಕ್ಷ ಕ್ಷೇತ್ರದಲ್ಲಿ ಯಥಾಸಾಧ್ಯ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಯ 20ನೇ ವಾರ್ಷಿಕೋತ್ಸವವು ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಅಕ್ಟೋಬರ್ 17ರಂದು ಸಂಪನ್ನಗೊ೦ಡಿತು. ಈ ಸಂದರ್ಭದಲ್ಲಿಆರು ಮಂದಿ ಯಕ್ಷಕಲಾ ಸಾಧಕರಿಗೆ ಸಮ್ಮಾನಿಸಲಾಯಿತು.
ಈ ಆರು ಮಂದಿ ಕಲಾರತ್ನಗಳ ಪರಿಚಯ ಇಲ್ಲಿದೆ.
ಕುಬಣೂರು ಶ್ರೀಧರ ರಾವ್
|
|
ಕುಬಣೂರು ಶ್ರೀಧರ ರಾವ್
|
ದೇಲಂತಮಜಲು ಸುಬ್ರಹ್ಮಣ್ಯ ಭಟ್
|
ಕೆ.ಎಸ್. ಕೃಷ್ಣಯ್ಯ ಹಾಗೂ ರುಕ್ಮಿಣಿ ಅಮ್ಮ ದಂಪತಿಯ ಪುತ್ರರಾಗಿ ಕಾಸರಗೋಡಿನ ಕುಬಣೂರು ಎಂಬಲ್ಲಿ ಜನಿಸಿದ ಇವರು ಎಂಜಿನಿಯರ್ ಆಗಿ ವೃತ್ತಿನಿರತರಾಗಿದ್ದರು. ಯಕ್ಷಗಾನ ಆಸಕ್ತರಾಗಿ ನಾಟ್ಯ, ಹಿಮ್ಮೇಳ ವಾದನ ಹಾಗೂ ಭಾಗವತಿಕೆ ಕಲಿತು ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸಿ ಆ ಬಳಿಕ ತಮ್ಮ 30ನೇ ಹರೆಯದಲ್ಲಿ ಮೇಳದ ವೃತ್ತಿರಂಗ ಪ್ರವೇಶಿಸಿದರು. ಕಳೆದ 24 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಲಂತಮಜಲು ಸುಬ್ರಹ್ಮಣ್ಯ ಭಟ್
ತೆಂಕುತಿಟ್ಟಿನ ಪ್ರಸಿದ್ಧ ಮದ್ದಳೆಗಾರರಾಗಿರುವ ಸುಬ್ರಹ್ಮಣ್ಯ ಭಟ್ಟರು ಕೃಷ್ಣ ಭಟ್ಟ ಹಾಗೂ ಪಾರ್ವತಿ ಅಮ್ಮ ದಂಪತಿಯ ಸುಪುತ್ರ. ಇವರು ನೆಡ್ಲೆ ನರಸಿಂಹ ಭಟ್ ಅವರಲ್ಲಿ ಹಿಮ್ಮೇಳವಾದನವನ್ನು ಅಭ್ಯಸಿಸಿ ಯಕ್ಷರಂಗ ಪ್ರವೇಶಿಸಿದರು. ಕಳೆದ 28 ವರ್ಷ ಗಳಿಂದ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿ ಪ್ರಸಿದ್ಧ ಮದ್ದಳೆಗಾರ ಎನಿಸಿಕೊಂಡಿದ್ದಾರೆ, ಪ್ರಕೃತ ಎಡನೀರು ಮಠದ ಮೇಳ ದಲ್ಲಿ ಪ್ರಧಾನ ಮದ್ದಳೆವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಂಟ್ವಾಳ ಜಯರಾಮ ಆಚಾರ್ಯ
ಬಂಟ್ವಾಳದಲ್ಲಿ ಗಣಪತಿ ಆಚಾರ್ಯ ಹಾಗೂ ಭವಾನಿ ದಂಪತಿಯ ಪುತ್ರರಾಗಿ ಜನಿಸಿದರು. ಶ್ರೀ ಧರ್ಮಸ್ಥಳ ಕ್ಷೇತ್ರದ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರು ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸವನ್ನು ನಡೆಸಿ 13ರ ಹರೆಯದಲ್ಲಿ ರಂಗಪ್ರವೇಶ ಮಾಡಿದರು. ಕಳೆದ ನಾಲ್ಕೂವರೆ ದಶಕಗಳಿಂದ ವಿವಿಧ ವೃತ್ತಿ ಮೇಳಗಳಲ್ಲಿ ಯಕ್ಷ ಸೇವೆ ಮಾಡುತ್ತಾ ಇದೀಗ ಹೊಸನಗರ ಮೇಳ ದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುರೇಶ್ ರಾವ್ ನೂಯಿ
ಪೊಳಲಿ ಕ್ಷೇತ್ರದ ಸನಿಹದಲ್ಲಿರುವ ಅಡೂರು ನೂಯಿ ಎಂಬಲ್ಲಿ ಪಟೇಲ ಎ.ಎಂ. ವೆಂಕಪ್ಪಯ್ಯ ಹಾಗೂ ಗೌರಮ್ಮ ದಂಪತಿಯ ಪುತ್ರರಾಗಿ ಸುರೇಶ ರಾಯರು ಜನಿಸಿದರು. ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿ 36 ವರುಷದ ಅವಿರತ ಸೇವೆ ಸಲ್ಲಿಸಿ ಸುರೇಶ ಮಾಸ್ಟ್ರೆ ಎಂದೆನಿಸಿ ಜನಪ್ರಿಯರಾದರು. ಹವ್ಯಾಸಿ ಯಕ್ಷಗಾನ ಹಾಸ್ಯ ಕಲಾವಿದರಾಗಿಯೂ ತುಳು, ಕನ್ನಡ ನಾಟಕ ರಂಗದಲ್ಲಿ ಹಾಸ್ಯ ಕಲಾವಿದರಾಗಿಯೂ ಪ್ರಸಿದ್ಧರು.
|
|
ಬಂಟ್ವಾಳ ಜಯರಾಮ ಆಚಾರ್ಯ
|
ಉದಯ ನಾವಡ ಮಧೂರು
|
ಉದಯ ನಾವಡ ಮಧೂರು
ಕಾಸರ ಗೋಡು ಜಿಲ್ಲೆಯ ಪವಿತ್ರ ತಾಣ ಮಧೂರಿ ನಲ್ಲಿ ವಿಷ್ಣು ನಾವಡ - ಲೀಲಾವತಿ ದಂಪತಿಯ ಪುತ್ರರಾಗಿ ಜನಿಸಿದರು. ತೀರ್ಥರೂಪರ ಪ್ರೋತ್ಸಾಹದಿಂದ ಕೂಡ್ಲು ನಾರಾಯಣ ಬಲ್ಯಾಯರ ಬಳಿ ನಾಟ್ಯಾಭ್ಯಾಸ ಮಾಡಿ ತನ್ನ 14ನೇ ವರ್ಷದಲ್ಲಿ ರಂಗ ಪ್ರವೇಶಿಸಿದರು. ತೆಂಕು ಬಡಗು ತಿಟ್ಟುಗಳಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಪ್ರಸಿದ್ಧ ಕಲಾವಿದರಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ.
ರಮೇಶ್ ಕುಲಶೇಖರ
ವಿಟ್ಲ ಬಳಿಯ ಮಂಗಳಪದವು ಎಂಬಲ್ಲಿ ಮುಂಡಪ್ಪ ಪೂಜಾರಿ ಹಾಗೂ ದೇವಕಿ ದಂಪತಿಗೆ ಪುತ್ರರಾಗಿ ಜನಿಸಿದರು. ವೀರಪ್ಪ ಕಾನಡ್ಕ ಅವರ ಪ್ರೋತ್ಸಾಹದಿಂದ ಯಕ್ಷಗಾನ ನಾಟ್ಯ ಅಭ್ಯಸಿಸಿ, ಜಪ್ಪು ದಯಾನಂದ ಶೆಟ್ಟರಲ್ಲಿ ಹೆಚ್ಚಿನ ರಂಗಾನುಭವ ಪಡೆದು ಸ್ತ್ರೀ ಪಾತ್ರಧಾರಿಯಾಗಿ ಪ್ರಸಿದ್ಧರಾಗಿದ್ದಾರೆ. ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿ ಕಳೆದ 26 ವರ್ಷಗಳಿಂದ ಶ್ರೀ ಸಸಿಹಿತ್ಲು ಮೇಳದ ಪ್ರಬಂಧಕರಾಗಿ ಹಾಗೂ ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದಾರೆ.
*********************
ಫೋಟೋ ಕೃಪೆ : ನಟೇಶ್ ವಿಟ್ಲ ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಾಭಿಮಾನಿಗಳು
ಕೃಪೆ :
udayavani
|
|
|